ಶಿರಸಿ: ಕರ್ನಾಟಕ ಜಾನಪದ ಪರಿಷತ್ತು ಶಿರಸಿ ವತಿಯಿಂದ ಮಾತೃ ಮಂಡಳಿ ವಿವೇಕಾನಂದ ನಗರ ಇವರ ಸಹಕಾರದೊಂದಿಗೆ ವರಸಿದ್ಧಿವಾನಾಯಕ ದೇವಸ್ಥಾನದಲ್ಲಿ ಮಾ.16 ರಿಂದ ಮಾ.20ರವರೆಗೆ ತಾಳಮದ್ದಲೆ ಪಂಚಕ “ಸಂಧಾನ ಪೂರ್ವರಂಗ” ಎಂಬ ಅದ್ಧೂರಿ ತಾಳಮದ್ದಲೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಕೃಷ್ಣ ಪದಕಿ ಉದ್ಘಾಟಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷರಾದ ಡಾ.ವೆಂಕಟೇಶ ನಾಯ್ಕ ಉಪಸ್ಥಿತರಿದ್ದರು. ಜಗದೀಶ ಭಂಡಾರಿ, ಗಣಪತಿ ಭಟ್ ವರ್ಗಾಸರರ ನೇತೃತ್ವದಲ್ಲಿ ಐದು ದಿನಗಳವರೆಗೆ ನಡೆದ ತಾಳಮದ್ದಲೆ ಪಂಚಕವು ನುರಿತ ಅರ್ಥಧಾರಿಗಳಿಂದ ಆಖ್ಯಾನಿಸಲ್ಪಟ್ಟು ಯಶಸ್ವಿಯಾಯಿತು.
ಹಿಮ್ಮೇಳದಲ್ಲಿ ಗೋಪಾಲಕೃಷ್ಣ ಕಡತೋಕ, ಭಾಗವತರಾಗಿ, ಮದ್ದಲೆ ವಾದನದಲ್ಲಿ ಶ್ರೀಪಾದ ಭಟ್ ಮುಡಗಾರು ಪ್ರಮುಖ ಪಾತ್ರ ವಹಿಸಿದ್ದರು. ವಿಭಿನ್ನವಾಗಿ ಆಚರಿಸಲ್ಪಟ್ಟ ಈ ಐದು ದಿನದ ತಾಳಮದ್ದಲೆಯಲ್ಲಿ ೧೮ ಅರ್ಥಧಾರಿಗಳಾದ
ಎಚ್.ಬಿ.ನಾಯಕ, ಜಿ.ಎ.ಹೆಗಡೆ, ಸೀತಾರಾಂ ಚಂದು, ಗಣಪತಿ ಭಟ್ಟ ವರ್ಗಾಸರ, ಟಿ.ಎಂ.ರಮೇಶ, ಬಾಲಚಂದ್ರ ಭಟ್ ಕರಸುಳ್ಳಿ, ಎಂ.ವಿ.ಹೆಗಡೆ ಅಮಚೀಮನೆ, ಶ್ರೀನಿವಾಸ ಭಾಗ್ವತ ಮತ್ತಿಘಟ್ಟ, ಎಸ್.ಎಸ್.ಭಟ್ಟ, ಸುಮಾ ಹೆಗಡೆ ಗಡಿಗೆಹೊಳೆ ರೋಹಿಣಿ ಹೆಗಡೆ, ನಿರ್ಮಲಾ ಗೋಳಿಕೊಪ್ಪ, ರೇಣುಕಾ ನಾಗರಾಜ, ಸಂಧ್ಯಾ ಅಜಯ್, ಲತಾ ಗಿರಿಧರ, ಭವಾನಿ ಭಟ್, ಸುಜಾತಾ ಹೆಗಡೆ ದಂಟಕಲ್ ತಮ್ಮ ವಾಗ್ಝರಿಯಿಂದ ಪ್ರಸಂಗಕ್ಕೆ ರಂಗು ತಂದಿದ್ದು ವಿಶೇಷವಾಗಿತ್ತು. ಆರಂಭದಲ್ಲಿ ಗಣಪತಿ ಸ್ತುತಿಯನ್ನು ಗೋಪಾಲಕೃಷ್ಣ ಭಾಗವತರು ಮಾಡಿದರು. ಪ್ರತಿದಿನವು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಕಾರ್ಯಕ್ರಮವು ಜನರ ಪ್ರಶಂಸೆಗೆ ಪಾತ್ರವಾಯಿತು. ಮಾತೃ ಮಂಡಳಿಯ ವಿಜಯಾ ಗಣಪತಿ ಶೆಟ್ಟಿಯವರು ನಿರೂಪಿಸಿದರು. ಎಂ.ಎಸ್. ಹೆಗಡೆಯವರು ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ಅನುಭವಿ ಕಲಾವಿದ ರಾಜು ನಾಯ್ಕ ಪ್ರತಿದಿನ ಆಖ್ಯಾನವನ್ನು ಪ್ರಬುದ್ಧತೆಯಿಂದ ಅವಲೋಕಿಸಿದರು. ಕೇಶವ ಹೆಗಡೆ, ವಾಸುದೇವ ಶಾನಭಾಗ, ಆರ್.ಎನ್.ಹೆಗಡೆ, ಜಿ.ಎಸ್.ಭಟ್ಟ, ವಿ. ಉಮಾಕಾಂತ ಭಟ್ ಮತ್ತು ಅನೇಕ ಹಿರಿಯ ಕಲಾಭಿಮಾನಿಗಳು ಸಂತಸ ವ್ಯಕ್ತಪಡಿಸಿ ಮನಸ್ಸು ಪ್ರಫುಲ್ಲಗೊಳಿಸಿದ ಜ್ಞಾನಸತ್ರಕ್ಕೆ ಸಾಕ್ಷಿಯಾದರು.
ಕೊನೆಯ ದಿನ ವಿಜಯಾ ಗಣಪತಿ ಶೆಟ್ಟಿ ದಂಪತಿಗಳನ್ನು ಹಾಗೂ ರಾಜು ನಾಯ್ಕ, ಎಚ್.ಬಿ.ನಾಯ್ಕ, ನಿರ್ಮಲಾ ಗೋಳಿಕೊಪ್ಪ ಮತ್ತು ಎಸ್.ಎಸ್.ಭಟ್ಟ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.